ಚೆನ್ನೈ ನಲ್ಲಿ ಕನ್ನಡ ರಾಜ್ಯೊತ್ಸವ - ನವೆಂಬರ್ ೧, ೨೦೧೩:


ಕನ್ನಡ ಸಾಹಿತ್ಯ ಪರಿಷತ್ ಮತ್ತು ಮದ್ರಾಸ್ ವಿಶ್ವವಿದ್ಯಾಲಯ, ಚೆನ್ನೈ ವತಿಯಿಂದ ನಿನ್ನೆ ನವೆಂಬರ್ ೧ ರಂದು ಕನ್ನಡ ರಾಜ್ಯೊತ್ಸವ ಸಮಾರಂಭ ನೆರೆವೇರಿತು. ಇದರಲ್ಲಿ ಇಲ್ಲಿನ ಕನ್ನಡ ಸಂಘಸಂಸ್ಥೆಗಳಾದ ಕನ್ನಡಿಗರ ಕೂಟ, ಬೆಸೆಂಟ್ ನಗರ್ , ಕರ್ನಾಟಕ ಸಂಘ, ಕನ್ನಡ ಬಳಗದ ಸದಸ್ಯ ಕುಟುಂಬಗಳು  ಸಕ್ರಿಯವಾಗಿ ಭಾಗವಹಿಸಿ  ಯಶಸ್ವಿಯಾಗಿಸಿದರು. ಈ ಸಮಾರಂಭವನ್ನು ರಾಷ್ಟ್ರಕವಿ ಕುವೆಂಪು ರವರ ಸ್ಮೃತಿಯಲ್ಲಿ ಏರ್ಪಡಿಸಲಾಗಿತ್ತು.

ಗಣಪತಿ ಪ್ರಾರ್ಥನೆಯಿಂದ ಆರಂಭಗೊಂಡ ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಭಟ್ ಅರ್ತಿಕಜೆ ವಹಿಸಿದ್ದರೆ, ಮುಖ್ಯ ಅತಿಥಿಯಾಗಿ ಖ್ಯಾತ ಸಾಹಿತಿ-ವಾಗ್ಮಿ ಶ್ರೀ ವೈ ವಿ ಗುಂಡೂರಾವ್ ಉಪಸ್ಥಿತರಿದ್ದರು.

ಅಲ್ಲದೆ ತಮಿಳ್ನಾಡು ಕನ್ನಡ ಸಾಹಿತ್ಯ ಪರಿಷತ್ ನ ಶ್ರೀ ಕೆ.ಪಿ.ಆಚಾರ್, ಮತ್ತು ಮದರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯ್ಸಸ್ಥೆ ಡಾ, ತಮಿಳ್ ಸೆಲ್ವಿ ಯವರು ವೇದಿಕೆಯಲ್ಲಿ ಹಾಜರಿದ್ದು ಎಲ್ಲಾ ಕಾರ್ಯಕ್ರಮಗಳನ್ನೂ ಆಸಕ್ತಿಯಿಂದ ವೀಕ್ಷಿಸಿದರು. 
ಡಾ. ತಮಿಳ್ ಸೆಲ್ವಿಯವರು ನೀಡಿದ ಕುವೆಂಪು ಕೃತಿ " ಶ್ರೀ ರಾಮಾಯಣ ದರ್ಶನಮ್" ಬಗ್ಗೆಯ ವ್ಯಾಖ್ಯಾನ ಅವರ ಸ್ವಂತ ಭಾಷಾಪಾಂಡಿತ್ಯ,ಸ್ವಾನುಭವ ಮತ್ತು ಸುಲಲಿತ ವಾಗ್ಝರಿಯ ಪ್ರತೀಕವಾಗಿದ್ದು ಎಲ್ಲರಿಗೂ ಕುವೆಂಪು ರವರ ನೀತಿ ದ್ಯೋತಕವಾದ ಈ ಮೇರು ಕೃತಿಯ ಪುಟಗಳನ್ನು ಮನವರಿಕೆ ಮಾಡಿಕೊಟ್ಟಂತಾಯಿತು.

ಕಲಾವಿದರ ಮನರಂಜನಾ ಕಾರ್ಯಕ್ರಮಗಳಲ್ಲಿ ಚಿ. ರಾಜೇಶ್ ರವರ ಸುಮಧುರ ಪಿಟೀಲ್ ವಾದನ ಸಂಗೀತ ಪ್ರೇಮಿಗಳ ಮನ ಸೆಳೆದರೆ ಕಿರಿಯ ಚಿ.ವಂಶಿಯ ಕೊಳಲು ವಾದನದ ವಿಶಿಷ್ಟ ಪ್ರತಿಭೆ ಬೆರಗಾಗುವಂತಿದ್ದು ಎಲ್ಲರಿಂದ ಮುಕ್ತ ಶ್ಲಾಘನೆ ಪಡೆಯಿತು.

 ಕು.ನಿಧಿ ಮತ್ತು ಶ್ರೀಮತಿ.ಶ್ಯಾಮಲಾರವರ ಯುಗಳ ಗೀತೆ: " ತೆರೆದಿದೆ ಮನೆ ಓ ಬಾ ಅತಿಥಿ" ಮಧುರವಾದ ದನಿಯಲ್ಲಿ ಮೂಡಿಬಂದು ಎಲ್ಲರ ಗಮನ ಸೆಳೆದು ಹೆಚ್ಚು ಪ್ರಶಂಸೆಗೆ ಪಾತ್ರವಾಯಿತು.

ಭರತನಾಟ್ಯವಾಡಿದ ನಾಟ್ಯ ಮಯೂರಿ ಖ್ಯಾತಿಯ ಕು|| ಪ್ರಿಯದರ್ಶಿನಿಯವರ ನೃತ್ಯ ಮನೋಹರವಾಗಿದ್ದು ನಮ್ಮೆಲ್ಲರ ಕಣ್ಮನಗಳನ್ನು ತಣಿಸಿತು.

ಇದಲ್ಲದೆ ವಸಂತ್ ಹೆಗ್ಡೆ ಮತ್ತಿತರ ಹಲವು ಪುರುಷ ಮತ್ತು ಮಹಿಳಾ ಸದಸ್ಯ ಸದಸ್ಯೆಯರು ಕುವೆಂಪುರವರ "ದೋಣಿ ಸಾಗಲಿ" ಮುಂತಾದ ಕೆಲವು ಕವನಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು. 

ಶ್ರೀ ಕೃಷ್ಣಭಟ್ ರವರು ತಮ್ಮ ಭಾಷಣದಲ್ಲಿ ತಮ್ಮದೇ ಆದ ವಿಶೇಷ ಶೈಲಿಯಲ್ಲಿ ಚುಟುಕಗಳನ್ನು ಹಾಡಿ ನಗೆ ಹೊನಲು ಹರಿಸಿದರೆ, ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ವೈ ವಿ ಗುಂಡೂರಾಯರು  ಭಾಷಾ ಸಾಮರಸ್ಯ, ವೈವಿಧ್ಯತೆ, ಸಂಗೀತದಲ್ಲಿ ಬರುವ ಪೇಚಾಟದ ಸಂಗತಿಗಳು ಹೀಗೆ ಹತ್ತು ಹಲವಾರು ವೈವಿಧ್ಯಮಯ ವಿಚಾರಗಳನ್ನು ಹಾಸ್ಯ ಲೇಪಿತವಾದ ಶೈಲಿಯಲ್ಲಿ  ವರ್ಣಿಸಿ ತಮ್ಮ ಸಮಯಸ್ಪೂರ್ತಿಯ ಮಾತುಗಳಿಂದ ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸಿಯೂ ಅದರಲ್ಲಿ ಅಡಗಿದ್ದ ಸಂದೇಶ ಮತ್ತು ವಿವೇಕ ವಾಣಿಯನ್ನು ಒತ್ತಿ ಹೇಳಲು ಮರೆಯಲಿಲ್ಲ.

ಸಮಾರಂಭದ ನಂತರ ಅಲ್ಲಿಯೇ ರುಚಿಕರ ಉಪಹಾರವನ್ನು ಏರ್ಪಡಿಸಿದ್ದರಿಂದ ಎಲ್ಲರೂ ಅದನ್ನು ಸವಿದು ತೃಪ್ತಿಯಿಂದ ಹಿಂತಿರುಗುವಂತಾಯಿತು.

ಕೆಲವು ಛಾಯಾಚಿತ್ರಗಳು:
 ಸನ್ಮಾನ

ಪಿಟೀಲ್ ವಾದನ

ಯುಗಳ ಗೀತೆ

ಕನ್ನಡಿಗರ ಕೂಟ- ವೃಂದಗಾನ

Comments

Popular Posts